<ಕುಮಾರವ್ಯಾಸ ಭಾರತ
ಕರ್ಣಾಟ ಭಾರತ ಕಥಾಮಂಜರಿ, ಉದ್ಯೋಗಪರ್ವ: ೦೪/ನಾಲ್ಕನೆಯ ಸಂಧಿ
---ॐॐॐ---

ಸೂಚನೆ||ಮುನಿವರನ ಕರುಣದಲಿ ಕೌರವ
ಜನಪನಮಳ ಬ್ರಹ್ಮವಿದ್ಯೆಯ
ನನುಕರಿಸಿ ಚರಿತಾರ್ಥಭಾವದಲಿರುಳನೂಕಿದನು||

ಕೇಳು ಜನಮೇಜಯ ಧರಿತ್ರೀ
ಪಾಲ ವಿದುರನ ಭೋದೆಗಂಧನೃ
ಪಾಲನಂತಃಕರಣಶುದ್ಧಿಯನೆಯ್ದಿದನು ಬಳಕ|
ಹೇಳು ಹೇಳಿನ್ನಾತ್ಮವಿದ್ಯೆಯ
ಮೂಲ ಮಂತ್ರಾಕ್ಷರದ ಬೀಜವ
ನಾಲಿಸುವೆನೆನೆ ನಗುತ ಕೈಮುಗಿದೆಂದನಾವಿದುರ||೧||

ಅವಧರಿಸು ಪರತತ್ವ ವಿದ್ಯಾ 
ವಿವರ ಭೇದವನನ್ಯಜಾತಿಗ 
ಳೆವಗೆ ಸಲುವುದೆ ಮುನಿವರನ ಕರುಣೋದಯದಲಹುದು 
ಅವರಿವರುಗಳ ಮುಖದಲಿದು ಸಂ 
ಭವಿಸುವುದೆ ಬ್ರಹ್ಮೋಪದೇಶದ 
ಹವಣ ಬಲ್ಲವನಾವನೈ ಧೃತರಾಷ್ಟ್ರ ಕೇಳೆಂದ ||೨||

ಒಬ್ಬನೇ ಬಲ್ಲವನು ಲೋಕದೊ 
ಳಿಬ್ಬರಿಲ್ಲ ಸನತ್ಸುಜಾತನು 
ಸರ್ವಗುಣಸಂಪೂರನಾತನ ಭಜಿಸಿದೊಡೆ ನೀನು 
ಸಭ್ಯನಹೆಯೆನಲಾ ಮುನಿಯ ಕ 
ರ್ತವ್ಯಭಾವನೆಯೊಳರಸನಿರಲಾ 
ವಿರ್ಭವಿಸಿದನು ವಿಪ್ರಕುಲಕಮಲಾರ್ಕನಾ ಕ್ಷಣಕೆ ||೩||

ನೆನೆಯಲೊಡನೆ ಸನತ್ಸುಜಾತನು 
ಮನೆಗೆಬರಲಿದಿರೆದ್ದು ಕೌರವ 
ಜನಕ ಮೈಯಿಕ್ಕಿದನೆನಗೆ ಬ್ರಹ್ಮೋಪದೇಶವನು 
ಮುನಿಪ ನೀ ಕೃಪೆಮಾಡಬೇಕೆನ 
ಲನುನಯದೊಳವನೀಪತಿಗೆ ಜನ 
ಜನಜನಿತವೆನಲರುಹಿದನು ಪರಲೋಕಸಾಧನವ ||೪||

ಚಿತ್ತವಿಸು ಧೃತರಾಷ್ಟ್ರ ನೃಪ ಪರ 
ತತ್ವವಿದ್ಯಾವಿಷಯ ಭೇದವ 
ಬಿತ್ತರಿಸುವೆನು ಸಕಲ ಸಚರಾಚರದೊಳಗೆ ನೀನು 
ಉತ್ತಮಾಧಮವೆನ್ನದೇ ಕಾ 
ಣುತ್ತ ಹರುಷ ವಿಷಾದದಲಿ ಮುಳು
ಗುತ್ತಿರದೆ ಸಮರಸದೊಳಿಹುದುಪದೇಶ ನಿನಗೆಂದ ||೫||

ಅವನಿಪತಿ ಕೇಳಾತ್ಮನಿಂ ಸಂ 
ಭವಿಸಿತಂಬರವಂಬರದಲಾ
ಪವನ ಪವನನಲಗ್ನಿ ಅಗ್ನಿಯಲಾದುದಾ ಭುವನ 
ಭುವನದಿಂ ಧರೆ ಧರಣಿಯಿಂದು 
ದ್ಭವಿಸಿತೋಷಧಿ ಓಷಧಿಗಳಿಂ 
ದವತರಿಸಿತಾ ನಾದಿಪುರುಷ ಪ್ರಕೃತಿ ವಿಕೃತಿಗಳು ||೬||

ನೇತ್ರ ನಾಸಿಕ ಪಾದ ಪಾಣಿ 
ಶೋತ್ರವೆಂಬಿವು ತಮ್ಮೊಳೊಂದೇ 
ಸೂತ್ರದಲಿ ಸಂಸೃಷ್ಟವಾಗಿ ಸಮಾನಬುದ್ಧಿಯಲಿ 
ಗಾತ್ರವಿಡಿದಿಹವೋಲು ವಿಶ್ವದ 
ಮೈತ್ರಿಯಲಿ ಮನಸಂದು ಪಾತ್ರಾ 
ಪಾತ್ರವೆನ್ನದೆ ಬೆರಸಿ ಬದುಕುವುದಧಿಕಗುಣವೆಂದ ||೭||

ಸೃಷ್ಟಿ ಸಂಹಾರದಲಿ ಭೂತದ 
ಕಟ್ಟಳೆಗಳ ಗತಾಗತಿಗಳಲಿ 
ಮುಟ್ಟಿಸಿದ ವಿದ್ಯೆಯಲವಿದ್ಯೆಯಲಪ್ರತಿಮನೆನಿಸಿ 
ನಷ್ಟಿಯಲಿ ತುಷ್ಟಿಯಲಿ ಮನವನು 
ಬಿಟ್ಟು ಹಿಡಿಯದೆ ಕಾಲಕರ್ಮವ 
ಮೆಟ್ಟಿ ನಿಲೆ ಭಗವಂತನೆನಿಸುವೆ ರಾಯ ಕೇಳೆಂದ ||೮||

ಅಣುವಿನಲಿ ಲಘುವಿನಲಿ ಗುರುವಿನ 
ಯೆಣಿಕೆಯಲಿ ಮಹಿಮೆಯಲಿ ಪ್ರಾಪ್ತಿಯ 
ಭಣಿತೆಯಲಿ ಶೀಲತ್ವದಲಿ ವೆಂ 
ಟಣಿಸಿ ರೇಚಕ ಪೂರಕದ ರಿಂ 
ಗಣವನರಿವುದು ಯೋಗಸಿದ್ಧಿಗೆ ಲಕ್ಷಣವನೆಂದ ||೯||

ತ್ಯಜಿಸುವುದು ದುಸ್ಸಂಗವನು ನೀ 
ಸೃಜಿಸುವುದು ಸತ್ಸಂಗವನು ಗಜ 
ಬಜಿಸದಿರಹೋರಾತ್ರಿಯಲಿ ಧರ್ಮವನೆ ಸಂಗ್ರಹಿಸು 
ಭಜಿಸು ನಿತ್ಯಾನಿತ್ಯವಸ್ತುವ 
ವಿಜಯನಹೆ ಇಹಪರಕೆ ತತ್ವದ 
ನಿಜವಿದೆಲೆ ಧೃತರಾಷ್ಠ್ರ ಚಿತ್ತೈಸೆಂದನಾ ಮುನಿಪ ||೧೦||
ಕಾಯವಿದು ನೆಲೆಯಲ್ಲ ಸಿರಿ ತಾ 
ಮಾಯಾರೂಪಿನ ಮೃತ್ಯುದೇವತೆ 
ಬಾಯ ಬಿಡುತಿಹಳಾವುದೀತನ ಕಾಲಗತಿಯೆಂದು 
ದಾಯವರಿದು ಮಹಾತ್ಮರಿದಕೆ ಸ 
ಹಾಯ ಧರ್ಮವ ರಚಿಸುವುದು ನಿ 
ರ್ದಾಯದಲಿ ಕೈಸೂರೆಗೊಂಬುದು ಮುಕುತಿ ರಾಜ್ಯವನು ||೧೧||

ಕೆಟ್ಟ ಮಾರ್ಗದಲಿಂದ್ರಿಯಂಗಳ 
ಚಿಟ್ಟುಮುರಿಯಾಟದಲಿ ಮನ ಸಂ 
ದಷ್ಟವಾಗಿಯನಿತ್ಯಸಂಸಾರದ ಸುಖಕ್ಕೆಳಸಿ 
ಹುಟ್ಟು ಸಾವಿನ ವಿಲಗದಲಿ ಕಂ 
ಗೆಟ್ಟು ನಾನಾ ಯೋನಿಯಲಿ ತಟ 
ಗುಟ್ಟಿ ಬಳಲುವುದುಚಿತವೇ ಭೂಪಾಲ ಕೇಳೆಂದ ||೧೨||
ಹಲವು ವರ್ಣದೊಳೆಸೆವ ಗೋ ಸಂ 
ಕುಲದೊಳೊಂದೇ ವರ್ಣದಲಿ ಕಂ 
ಗೊಳಿಸುವೀ ಕ್ಷೀರಾಮೃತವು ಮೈಗೊಂಡು ತೋರ್ಪಂತೆ 
ಹೊಲಬುಗೆಟ್ಟ ಚರಾಚರಂಗಳ 
ಸುಳಿವಿನಲಿ ಸುಳಿದಡಗಿ ಕಡೆಯಲಿ 
ನಿಲುವ ನಿಜವೊಂದಲ್ಲದೆರಡಿಲ್ಲೆಂದನಾ ಮುನಿಪ ||೧೩||

ಅತಿಶಯದ ಸುಕೃತವನು ವಿರಚಿಸಿ 
ಗತಿವಡೆದು ಸ್ವರ್ಗಾದಿ ಭೋಗೋ
ನ್ನತಿಕೆಯನು ಭೋಗಿಸಿದ ಸಮನಂತರದೊಳವನಿಯಲಿ 
ಪತನ ತಪ್ಪದು ಮರಳಿ ಬಾರದ 
ಗತಿಯನರಿದು ಮಹಾನುಭಾವರ 
ಮತವಿಡಿದು ನಡೆವುದು ನಯವು ಕೇಳೆಂದನಾ ಮುನಿಪ ||೧೪||

ಸಕಲ ಧರ್ಮದ ಸಾರವನು ಮತಿ 
ವಿಕಳನಾಗದೆ ಚಿತ್ತವಿಸು ಬಾ 
ಧಕವದಾವುದು ನಿನಗದನು ನೀನನ್ಯರುಗಳಲ್ಲಿ 
ಯುಕುತಿಯಿಂದದಮಾಡದಿರು ನಿ 
ರ್ಮುಕುತನಹೆ ಸಂಸಾರದಲಿ ಸಾ 
ಧಕವಿದೊಂದೇ ಸಕಲ ಜನಮತವೆಂದನಾ ಮುನಿಪ ||೧೫||

ಒಂದು ವಸ್ತುವನೆರಡು ಮಾಡುವೆ
ನೆಂದು ಬುದ್ಧಿ ಭ್ರಾಂತಿಯಲಿ ಮನ 
ಸಂದು ಸಮ್ಯಗ್ಜ್ಞಾನದುದಯದ ನೆಲೆಯ ಕಾಣಿಸದೆ 
ದಂದುಗಂಬಡುತಿಹುದು ತತ್ವದ 
ಹಿಂದುಮುಂದರಿಯದೆ ಮಹಾತ್ಮರು 
ಬಂದ ಪಥದಲಿ ಬಾರದೇ ಕೆಡುತಿಹುದು ಜಗವೆಂದ ||೧೬||

ಪ್ರಣವದೊಂದಾ ವರ್ಣಮೂರರ
ಗುಣವಿಡಿದು  ತೋರುವ ಚರಾಚರ
ವೆಣಿಸಬಾರದು ವಿಶ್ವದಲಿ ನಿಸ್ಯೂತವಾಗಿಹುದು 
ಹಣಿದು ಬೀಳಲು ಹೊಳೆವ ಜ್ಯೋತಿ 
ರ್ಗಣದವೊಲು ತೊಳತೊಳಗಿ ಬೆಳಗುವ 
ಗುಣರಹಿತನ ನಿಜಸ್ವರೂಪವಿದೆಂದನಾ ಮುನಿಪ ||೧೭||

ನಳಿನಮಿತ್ರನು ಪಶ್ಚಿಮಾಂಬುಧಿ 
ಗಿಳಿಯೆ ನಾನಾ ಪಕ್ಷಿಜಾತಿಗಿ 
ಳುಲಿವುವೈತಂದೊಂದು ವೃಕ್ಷವನೇರಿ ರಾತ್ರಯನು 
ಕಕ್ಷೆದು ನಾನಾ ದೆಸೆಗೆ ಹರಿವವೊ
ಲಿಳೆಯ ಭೋಗದ ದೃಷ್ಟಿ ತೀರೀದ 
ಬಳಿಕ ಲೋಕಾಂತರವನೆಯ್ದುವರೆಂದನಾ ಮುನಿಪ ||೧೮||

ಪೊಡವಿಯೊಳಗುದಯಿಸಿದ ದುಷ್ಕೃತ 
ಬಿಡದು ಭೂಪರನದು ಪುಲೋಹಿತ 
ರೇಡೆಗೆ ಬಳಿಕಾ ಮೂರ್ಖ ಶಿಷ್ಯನ ದೋಷ ಗುರುವಿನದು 
ಮಡದಿ ಮಾಡಿದ ಪಾತಖವು ಪತಿ 
ಗೊಡಲಹುದು ಪರಮಾರ್ಥವಿದು ಪರಿ 
ವಿಡಿಯನರಿಯದೆ ಕೆಡುವುದೀ ಜಗವೆಂದನಾ ಮುನಿಪ ||೧೯||

ದುರ್ಜನರಿಗಂಜುವುದು ಲೋಕವು 
ಸಜ್ಜನರ ಲೆಕ್ಕಿಸದು ತಾರ್ಕ್ಷ್ಯನ 
ಸೆಜ್ಜೆಯೊಳಗಿಹ ದಂದಶೂಕನನರ್ಚಿಸುವರೊಲಿದು 
ಉಜ್ಜ್ವಲಿತ ಭಕ್ತಿಯಲಿ ಬಹಳ ವಿ 
ತರ್ಜೆಯಲಿ ಮೂಢಾತ್ಮರಿಕ್ಕಿದ 
ಹಜ್ಝೆಯಿದು ಲೋಕಕ್ಕೆ ಕೇಳ್ ನೀನೆಂದನಾ ಮುನಿಪ ||೨೦||

ತಳಪಟದೊಳಾಯುಷ್ಯ ರಾಶಿಯ 
ನಳೆವ ಕೊಳಗವು ಸೂರ್ಯನೆಂಬುದ 
ತಿಳಿದಹೋರಾತ್ರಿಯಲಿ ಸಂಖ್ಯೆಯ ಸಲುಗೆಯಂಕಿಸದೆ 
ಬಳಸುವುದು ಸನ್ಮಾರ್ಗದಲಿ ಮುಂ 
ಕೊಳಿಸುವುದು ಸದ್ಧರ್ಮದಲಿ ಕಳ 
ವಳಿಸದಿರು ಷಡುವರ್ಗದಲಿ ಕೇಳೆಂದನಾ ಮುನಿಪ ||೨೧||

ನಷ್ಟಿಯಿದು ಸಂಸಾರದೊಳಗು 
ತ್ಕೃಷ್ಟವಿದು ಮನ್ವಾದಿ ಮಾರ್ಗದ 
ದೃಷ್ಟವಿದು ಲೋಕಾಂತರದ ಸುಖದುಃಖದೇಳಿಗೆಯ
ಹುಟ್ಟುಮೆಟ್ಟಿನ ಕಾಲಕರ್ಮದ 
ಕಟ್ಟಳೆಯಿದೆಂದರಿದು ನಡೆವಂ 
ಗಿಟ್ಟಣಿಸುವುದದಾವುದೈಹೇಳೆಂದನಾ ಮುನಿಪ ||೨೨||

ಶಿಲೆಯ ರೂಹನು ಮೂಢರುಗಳ 
ಗ್ಗಳೆಯ ಪಾವಕನನು ಮಹೀಸುರ 
ರಿಯೊಳಗೆ ಪರಮಾತ್ಮನೇ ಪರದೈವ ತಾನೆಂದು 
ಒಲಿದು ಪೂಜಿಸುತಿಹರು ಹೃದಯಾಂ 
ಗದೊಳಗೆ ವರಯೋಗಿಗಳು ಕೈ 
ವಳಸುವುದು ಜನವೀ ಪ್ರಕಾರದೊಳರಸ ಕೇಳೆಂದ ||೨೩||

ಜ್ಞಾನಿಗಳನೊಡಬಡಿಸಬಹುದ 
ಜ್ಞಾನಿಗಳನಹುದೆನಿಸಬಹುದು 
ಜ್ಞಾನಲವವನು ಕೂಡಿಕೊಂಡಿಹ ದುರ್ವಿಗ್ಧರನು 
ಏನ ತಿಳುಹಲುಬಹುದು ವಿಷ್ವ
ಕ್ಸೇನಗಳವಲ್ಲರಸ ಮಿಕ್ಕಿನ 
ಮಾನವರ ಪಾಡಾವುದೆಂದನು ಮುನಿ ನೃಪಾಲಂಗೆ ||೨೪||

ದಾನವೊಂದಾ ಪಾಲನೆಯ ಫಲ 
ದಾನವೊಂದೇ ಉಭಯವಿದರೊಳು 
ದಾನದಿಂದಹುದಿಹಪರಂಗಳ ಸೌಖ್ಯ ಸಂಪದವು 
ದಾನವೇ ಸಂಸಾರ ಸಾಧನ 
ದಾನದಿಂ ಪಾಲನೆಯ ಫಲಕಿ 
ನ್ನೇನನೆಂಬೆನು ಕಡೆಯೊಳಚ್ಯುತ ಪದವಿ ಫಲವೆಂದ ||೨೫||

ಅರಸನೊಡೆಯನು ದಂಡನಾಥನು 
ಗೈರು ಹಿರಿಯನುತ್ತಮನು ದೈವಾ 
ಪರನು ಸಾಹಿತ್ಯನು ಸದಸ್ಯನು ಸತ್ಪುರುಷನೆಂದು 
ಪರಿಪರಿಯ ನಾಮಂಗಳಲಹಂ 
ಕರಿಸುವರು ಜೀವಾತ್ಮ ತೊಲಗಿದ 
ಮರುದಿವಸ ಹೆಣನೆನ್ನರೇ ಹೇಳೆಂದನಾ ಮುನಿಪ||೨೬||

ವರುಷ ಮೂರರೊಳು ಮಾಸ ಮೂರರೊ 
ಳಿರದೆ ಪಕ್ಷತ್ರಯದೊಳಗೆ ಬಂ 
ದರುಹುವುದು ಲಿನ ಮೂರರಲಿ ಸಂದೇಹಬೇಡಿದಕೆ 
ಧರೆಯೊಳುತ್ಕಟಪುಣ್ಯ ಪಾಪೋ 
ತ್ಕರದ ಫಲವಿದು ತಪ್ಪಬಾರದು 
ಮರಳುವುದು ಪರಲೋಕದೆಸೆಗವನೀಶ ಕೇಳೆಂದ ||೨೭||

ಒಂದು ಭೂಪಿಂಡದಲಿ ನಾನಾ 
ಚಂದದಿಂ ಪ್ರಾಣಿಗಳು ಜನಿಸುವು 
ವೊಂದು ಜ್ಯೋತಿಸ್ಸಿನಲಿ ನಾನಾ ಜ್ಯೋತಿಯುದಿಸುವುವು 
ಒಂದು ಪರವಸ್ತುವಿನ ಬಳಿಯಲಿ 
ಬಂದುದಬುಜಭವಾಂಡ ಕೋಟಿಗ 
ಳೆಂದೊಡವು ಬೇರಿಲ್ಲ ಸರ್ವವು ವಿಷ್ಣುಮಯವೆಂದ ||೨೮||

ತಾನಿದಿರು ಹಗೆ ಕೆಳೆ ವಿವೇಕ 
ಜ್ಞಾನವಜ್ಞಾನಂಗಳಿಹಪರ
ಹಾನಿ ವೃದ್ಧಿಯ ಮಾರ್ಗದಲಿ ತಾನೇಕ ಚಿತ್ದಲಿ 
ದಾನ ಧರ್ಮ ಪರೋಪಕಾರ ವಿ 
ಧಾನ ದೀಕ್ಷಾಕರ್ಮನಿಷ್ಠರು 
ಮಾನನೀಯರಲೇ ಮಹೀಪತಿ ಕೇಳು ನೀನೆಂದ ||೨೯||

ಕರಣ ಗುಣ ಸಂಹಣ ಸಂಧ್ಯಾಂ 
ತರದವಸ್ಥಾಂತರದಲೋಕೋ 
ತ್ಕರದ ತಾಪತ್ರಯದ ಲಕ್ಷಣಲಕ್ತಿತವನರಿದು 
ಪರಿವಿಡಿಯ ಮೂರ್ತಿತ್ರಯಂಗಳ 
ಗುರು ಲಘುವನಾರೈದು ನಡೆವಂ 
ಗರಿದೆನಿಸುವುದದಾವುದೈ ಹೇಳೆಂದನಾ ಮುನಿಪ ||೩೦||

ವೇದ ನಾಲ್ಕಾಶ್ರಮವು ತಾ ನಾ 
ಲ್ಕಾದಿಮೂರುತಿ ನಾಲ್ಕು ವರ್ಣ ವಿ 
ಭೇದ ನಾಲ್ಕಾ ಕರಣ ನಾಲುಕುಪಾಯ ನಾಲ್ಕರಲಿ 
ಭೇದಿಸಲು ಪುರುಷಾರ್ಥ ನಾಲ್ಕರ 
ಹಾದಿಯರಿದು ವಿಮುಕ್ತ ನಾಲುಕ 
ನೈದುವನು ಸಂದೇಹವೇ ಹೇಳೆಂದನಾ ಮುನಿಪ ||೩೧||

ಭೂತ ವರ್ಣಸ್ಥಾನ ಸರ್ಗ ನಿ 
ಪಾತವದರೊಳು ಕೃತ್ಯಗಳ ಸಂ 
ಜಾತಮುಖವಾವರಣಶರಸಂಗತಿಯ ಸೋಹೆಗಳ 
ಧಾತು ಮೂಲಾದಿಗಳನರಿವುದು 
ಪ್ರೀತಿಯಿಂದಿಹಪರವ ಗೆಲುವುದು 
ಭೂತಳದೊಳುತ್ತಮವಲೇ ಭೂಪಾಲ ಕೇಳೆಂದ ||೩೨||

ಆರು ಗುಣ ಋತುವರ್ಣ ವರ್ಗವ 
ದಾರು ದರ್ಶನ ಪಾತ್ರವಂಗವ 
ದಾರು ಭೇದದ ಬಗೆಯನರಿವುದು ಶಿಷ್ಟಮಾರ್ಗದಲಿ 
ತೋರುವೀ ಮಾಯಾ ಪ್ರಪಂಚವ 
ಮೀರಿ ಕೇಡಿಲ್ಲದ ಪದವ ಕೈ 
ಸೂರೆಗೊಂಬುದು ಪರಮ ಮಂತ್ರವಿದೆಂದನಾ ಮುನಿಪ ||೩೩||

ಜಲಧಿ ಮಾತೃಕೆ ವಾರ ಕುಲಗಿರಿ 
ಗಳು ವಿಭಕ್ತಿ ದ್ವೀಪ ಸರ್ಪಾ
ವಳಿ ಮುನೀಶ್ವರರುಗಳ ಧಾತು ಗಡಣದ ವೇದಿಗಳ 
ತಿಳಿದು ಕಾಲದ ಗತಿಯ ಗಮಕಂ 
ಗಳನರಿದು ನಡೆವವರುಗಳು ನಿ 
ರ್ಮಳದಲೆಡಹದೆ ಬೆರಸಿಕೊಂಬರು ಮುಕ್ತಿ ರಾಜ್ಯವನು ||೩೪||

ಕಾಯ ದಿಗ್ಬಂಧ ಪ್ರಣಾಮ ವಿ 
ಧೇಯವರ್ಚನೆ ಯೋಗಸಿದ್ಧಿ ನಿ 
ಕಾಯ ನಾಲ್ಕರ ಇಂದ್ರಿಯಸ್ಥಿತಿ ಗತಿಯನಾರೈದು 
ಆಯವನು ವಿವರಿಸುತ ಮೇಲಣ 
ಬೀಯವಿದು ತನಗೆಂಬುದನು ನಿ 
ರ್ದಾಯದಲಿ ನಿಶ್ಚಯಿಸಬೇಹುದು ರಾಯ ಕೇಳೆಂದ ||೩೫||

ನವ ನವ ವ್ಯೂಹಂಗಳಬುಜೋ 
ದ್ಭವನ ಪಾಳಿ ವಿಖಂಡ ನವರಸ 
ನವವಿಧಗ್ರಹ  ನಾಟಕಂಗಳ ಲಕ್ಷಣವನರಿದು 
ನವವಿಧಾಮಳ ಭಕ್ತಿರಸವನು 
ಸವಿದು ನಿತ್ಯಾನಿತ್ಯವಸ್ತುವ 
ನವರಸವನಾರೈದು ನಡೆವುದು ಭೂಪ ಕೇಳೆಂದ ||೩೬||

ಹತ್ತು ಮುಖದಲಿ ಲೋಕದೊಳಗು 
ತ್ಪತ್ತಿಯಾದ ಚರಾಚರಂಗಳ 
ಲುತ್ತಮಾಧಮರೆನ್ನದೇ ಹರಿ ಸರ್ವಗತನಾಗಿ 
ಸುತ್ತುವನು ನಾನಾ ತೆರದಲಿ ವಿ 
ಚಿತ್ರಚರಿತನು ಕಪಟ ನಾಟಕ 
ಸೂತ್ರಧಾರಕನೆಂದರಿದು ಸುಖಿಯಾಗು ನೀನೇಂದ ||೩೭||

ಲೇಸು ಮಾಡಿದಿರೆನ್ನ ಚಿತ್ತದ 
ಬೇಸರಿಕೆ ಬಯಲಾಯ್ತು ನಿಮ್ಮುಪ 
ದೇಶದಿಂದ ಕೃತಾರ್ಥನಾದೆನು ಗೆಲಿದೆನಿಹಪರವ 
ಗಾಸಿಯಾದುದು ರಾಗ ಲೋಭದ 
ಮೀಸಲಳಿದುದು ನಿಮ್ಮ ದೆಸೆಯಿಂ 
ದೇಸು ಧನ್ಯರೊ ನಾವು ಚಿತ್ತೈಸೆಂದನಾ ಭೂಪ ||೩೮ ||

ಸ್ವರ್ಗವಾವುದು ನರಕವಾವುದು 
ವಿಗ್ರಹದಲಹ ಸಿದ್ಧಿ ಯಾವುದ
ನುಗ್ರಹಿಸಲೇನಹುದು ಪಾತ್ರಾಪಾತ್ರವೆಂದರೇನು 
ಉಗ್ರವಾವುದು ದೈವದೊಳಗೆ ಸ 
ಮಗ್ರವಾವುದು ಧರ್ಮದೊಳಗ 
ವ್ಯಗ್ರದಿಂದುಪದೇಶಿಸಲು ಬೇಕೆಂದನಾ ಭೂಪ ||೩೯||

ಸುಲಭನತಿ ಸಾಹಿತ್ಯ ಮಂಗಳ 
ನಿಳಯನಗಣಿತ ಮಹಿಮನನ್ವಯ 
ತಿಲಕನನುಪಮಚರಿತ ದೈವಾಪರನು ಪುಣ್ಯನಿಧಿ 
ಕುಲಯುತನು ಕೋವಿದನು ಕರುಣಾ 
ಜಲಧಿ ಕೌತುಕ ಯುಕ್ತಿವಿದನೆಂ 
ದಿಳೆ ಹೊಗಳುತಿರಲದುವೆ ಕೇಳೈ ಸ್ವರ್ಗ ತಾನೆಂದ ||೪೦||

ಪಾಯಕನು ಪತಿತನು ಕೃತಘ್ನನು 
ಘಾತಕನು ಮರ್ಮನು ದುರಾಢ್ಯನ 
ಭೀತಕನು ದೂಷಕನು ದುರ್ಜನನಪ್ರಯೋಜಕನು 
ನೀತಿಹೀನನು ಜಾತಿಧರ್ಮ ಸ 
ಮೇತ ದೈವದ್ರೋಹಿಯೆಂಬುದು 
ಭೂತಳದೊಳೇ ನರಕ ಚಿತ್ತೈಸೆಂದನಾ ಮುನಿಪ ||೪೧||

ದೇಹವಿಡಿದಿಹ ಧರ್ಮವದು ನಿ 
ರ್ದೇಹದಲಿ ದೊರಕುವುದೆ ಮಾನವ 
ದೇಹವೇ ಸಾಧನ ಸಕಲ ಪುರುಷಾರ್ಥಶೀಲರಿಗೆ 
ಐಹಿಕಾಮುಷ್ಮಿಕದ ಗತಿ ಸಂ 
ಮೋಹಿಸುವುದು ಶರೀರದಲಿ ಸಂ 
ದೇಹವೇ ಧೃತರಾಷ್ಟ್ರಚಿತ್ತೈಸೆಂದನಾ ಮುನಿಪ ||೪೨||

ಗರುಡ ಪಂಚಾಕ್ಷರಿಯೊಳಲ್ಲದೆ 
ಗರಳ ಭಯವಡಗುವುದೆ ವಿಷ್ಣು 
ಸ್ಮರಣೆಯಿಂದಲ್ಲದೆ ಮಹಾಪಾತಕಕೆ ಕಡೆಯಹುದೆ 
ಹಿರಿದು ಸಂಸಾರಾಂಬುಧಿಯನು 
ತ್ತರಿಸುವೊಡೆ ಗುರುಮುಖದೊಳಲ್ಲದೆ 
ನಿರತಿಶಯವಿನ್ನಾವುದೈ ಹೇಳೆಂದನಾ ಮುನಿಪ ||೪೩||

ತನ್ನ ಮನೆಯಲಿ ಮೂರ್ಖನತಿ ಸಂ 
ಪನ್ನ ಪೂಜ್ಯನು ಭೂಮಿಪಾಲನು 
ತನ್ನ ದೇಶದೊಳಧಿಕ ಸ್ವಗ್ರಾಮದಲಿ ಪ್ರಭು ಪೂಜ್ಯ 
ಭಿನ್ನವಿಲ್ಲದೆ ಹೋದ ಠಾವಿನೊ 
ಳನ್ಯವೇನಿಸದೆ ವಿಶ್ವದೊಳು ಸಂ 
ಪನ್ನ ಪೂಜಾಪಾತ್ರರೈ ವಿದ್ವಾಂಸರುಗಳೆಂದ ||೪೪||

ಒಬ್ಬನಹನೈ ಶೂರ ನೂರರೊ 
ಳೊಬ್ಬನಹ ಸಾವಿರಕೆ ಪಂಡಿತ 
ನೊಬ್ಬನಹನೈ ವಕ್ತ ಶತಸಾವಿರಕೆ ಲೋಕದಲಿ 
ಒಬ್ಬ ದಾನಿಯ ಕಾಣೆ ನಾನಿ 
ನ್ನೊಬ್ಬರೊಬ್ಬರಿಗೊಂದು ಗುಣವದು 
ಸರ್ಬಗುಣ ಸಂಪನ್ನರೈ ವಿದ್ವಾಂಸರುಗಳೆಂದ ||೪೫||

ಸತಿಯರಿಗೆ ಗತಿ ಯಾವುದೈ ನಿಜ 
ಪತಿಗಳಲ್ಲದೆ ವಿಪ್ರಜಾತಿಗೆ 
ಹುತವಹನು ವರ್ಣತ್ರಯಕೆ ಭೂದೇವರುಗಳಿರಲು 
ಕ್ಷಿತಿಯೊಳತಿಶಯವಾವುದೈ ಭೂ 
ಪತಿಯೆ ಕೇಳಿಹಪರಕೆತ ಸುಖಸಂ 
ಗತಿಯನೊಲುವಡೆ ಪೂಜಿಸುವುದೈ ಬ್ರಾಹ್ಮಣೋತ್ತಮರ ||೪೬||

ಚೋರನನು ಕಂಟಕನ ಹಿಸುಣನ 
ಜಾರನನು ಷಂಡನನು ಸಮಯ ವಿ 
ಕಾರ ಭೇದಿನಿಯನಿಂತರುವರನು ಕಂಡು ಮನ್ನಿಸದೆ 
ದೂರದಲಿ ವರ್ಜಿಸವುದು ಬಹಿ 
ಷ್ಕಾರಿಗಳು ಸರ್ವಕ್ಕಿವರುಗಳು 
ಸಾರಿದುದು ಸರ್ವೇಶ್ವರನ ಮತವರಸ ಕೇಳೆಂದ ||೪೭||

ಮೊದಲಲಾ ಮಾಹಿಷಿಕನ ಮ 
ಧ್ಯದಲಿ ವೃಷಲೀವಲ್ಲಭನನಂ 
ತ್ಯದಲಿ ವಾಗ್ಧೋಷಕನ ಕಂಡವರುಗಳ ಭಾಗ್ಯನಿಧಿ 
ಕದಡಿ ಹರಿವುದು ಕಂಡ ಮುಖದಲಿ 
ಸದಮಳಿತ ಶಾಸ್ತ್ರಾರ್ಥ ನಿಶ್ಚಯ 
ವಿದನರಿದು ನಡಿವುದು ನಯವು ಭೂಪಾಲ ಕೇಳೆಂದ ||೪೮||

ಕುಲಮಹಿಷಿ ದುರ್ಮಾರ್ಗ ಮುಖದಲಿ 
ಗಳಿಸಿದರ್ಥವನುಂಡು ಕಾಲವ 
ಕಳೆವ ನಿರ್ಭಾಗ್ಯರು ಕಣಾ ಮಾಹಿಷಿಕರೆಂಬವರು 
ಇಳೆಯೊಳವರೊಡನಾಡಿದವದಿರು 
ಗಳಿಗೆ ನರಕಾರ್ಣವದೊಳಾಳುತ 
ಮುಳುಗುತಿರುತಿಹುದಲ್ಲದೇ ಗತಿಯಿಲ್ಲ ಕೇಳೆಂದ ||೪೯||

ದೈವದಾಧೀನದಲಿ ಜಗವಾ 
ದೈವ ಮಂತ್ರಾಧೀನ ಮಂತ್ರವು 
ಭೂವಿಬುಧರಾದೀನವಾಗಿಹುದಾಗಿ ಲೋಕದಲಿ 
ದೈವವೇ ಬ್ರಾಹ್ಮಣನದಲ್ಲದೆ 
ಭಾವಿಸಲು ಬುಧರಿಂದಧಿಕವ
ದೈವವೆಂಬುದಾವುದೈ ಹೇಳೆಂದನಾ ಮುನಿಪ ||೫೦||

ಕೆಲಸ ಗತಿಯಲಿ ಕಡೆದ ಶಿಲೆಯನು 
ಕಲುಕುಟಿಕನಿಳುಹುವನದಲ್ಲದೆ 
ಹಲವು ಪರಿಯಿಂದದನು ಲೋಕಕೆ ದೈವವನು ಮಾಡಿ 
ಸಲಿಸುವವರುಂಟೇ ಸುರಾಸುರ 
ರೊಳಗೆ ವಿಪ್ರೋತ್ತಮರುಳಿಯೆ ಜಗ 
ದೊಳಗೆ ದೈವವದಾವುದೈ ಹೇಳೆಂದನಾ ಮುನಿಪ ||೫೧||

ಎಣಿಸಬಹುದೂರ್ವರೆಯ ಸೈಕತ 
ಮಣಿಯನೊಯ್ಯಾರದಲಿ ಗಗನಾಂ 
ಗಣದೊಳೈತಹ ವೃಷ್ಟಿಬಿಂದುವ ಲೆಕ್ಕಗೊ ಳಬಹುದು 
ಎಣಿಸಬಾರದದೊಂದು ದಿವಿಜರ 
ಗಣಕೆಗೋಚರವಾಗಿ ಸದ್ಬ್ರಾ
ಹ್ಮಣನೊಳೊಬ್ಬನ ರಕ್ಷಿಸಿದ ಫಲವರಸ ಕೇಳೆಂದ ||೫೨||

ಜಾತಿಧರ್ಮವನನುಸರಿಸಿ ವರ 
ಮಾತೃಪಿತೃ ಪರಿಚರಿಯದಲಿ ಸಂ
ಪ್ರೀತಿವಡೆಯುತ ಪರಗುಣಸ್ತುತಿ ನಿಂದೆಗಳನುಳಿದು 
ಭೂತನಾಥನ ಭಕುತಿಯಲಿ ವಿ 
ಖ್ಯಾತವಹ ಗುರುದೈವದಲಿ ಭಯ 
ಭೀತಿ ಹಿರಿದಿರಲದುವೆ ಕೇಳ್ ಸುಕೃತಕಕೆ ಕಡೆಯೆಂದ ||೫೩||

ಅರ್ಥದಿಂದಹ ಸಿದ್ಧಿ ಯಾವುದ 
ನರ್ಥವೆಂಬುದದೇನು ತನಗೆ 
ಸ್ವಾರ್ಥವಾರು ಪರಾರ್ಥದಿಂದಹುದಾವುದವನಿಯಲಿ 
ತೀರ್ಥವಾವುದು ವಿಪ್ರರೊಹಳಗೆ ಸ 
ಮರ್ಥರಾರು ಸುಧಾತ್ರಿಯೊಳಗೆಯು 
ವ್ಯರ್ಥಜೀವಿಗಳಾರು ಚಿತ್ತೈಸೆಂದನಾ ಮುನಿಪ ||೫೪||

ಧನವನುಳ್ಳ ಮಹಾತ್ಮನಾವುದ 
ನೆನೆದೊಡದು ಕೈಸಾರುವುದು ನಿ 
ರ್ಧನಿಕ ಬಯಸಿದ ಬಯಕೆ ಬಯಲಹುದಲ್ಲದೇ ಬೇರೆ 
ಧನಿಕನಂತೆ ಸಮಸ್ತ ಸುಖ ಸಂ 
ಜನಿಸುವುದೆ ಸರ್ವಕ್ಕೆ ಸಾಧನ 
ಧನವದಲ್ಲದೆ ಭುವನದೊಳಗನ್ಯತ್ರವಿಲ್ಲೆಂದ ||೫೫||

ವ್ಯರ್ಥರುಗಳೊಡನಾಟ ತಮ್ಮ 
ಸ್ವಾರ್ಥವಿಲ್ಲದರುಗಳ ಕೂಟ ಪ 
ರಾರ್ಥದಿಂದುಜ್ಜೀವಿಸಿದವನ ಬದುಕು ಲೋಕದಲಿ 
ಅರ್ಥವಿಲ್ಲದ ಸಿರಿಯ ಸಡಗರ 
ಅರ್ಥಿಯಿಲ್ಲದ ಬಾಳುವೆಗಳಿವ 
ನರ್ಥ ಪಾರಂಪರೆಯಲೇ ಕೇಳೆಂದನಾ ಮುನಿಪ ||೫೬||

ಮಾಡುವುದು ಧರ್ಮವನು ಸುಜನರ 
ಕೂಡುವುದು ಪರಪೀಡೆಯೆಂಬುದ 
ಮಾಡಲಾಗದು ಕರಣ ಮೂರರೊಳಲ್ಲದಾಟವನು 
ಆಡಲಾಗದು ದಸ್ಯುಜನವನು 
ಕೂಡಲಾಗದಿದೆಂಬ ಮಾರ್ಗವ 
ನೋಡಿ ನಡೆವುದು ತನಗೆ ಪರಮ ಸ್ವಾರ್ಥಕರವೆಂದ ||೫೭||

ಕರಿತುರಗ ಮೊದಲಾದ ವಸ್ತುಗ 
ಳರಮನೆಗಳಲಿ ಪುತ್ರಮಿತ್ರರು 
ತರುಣಿಯರು ಸಹಭವರು ಗೋತ್ರಜರಡವಿಯೊಳಗಿಕ್ಕಿ 
ತಿರುಗುವರು ನಿಜಸುಕೃತ ದುಷ್ಕೃತ 
ವೆರಡು ಬೆಂಬಿಡವಲ್ಲದುಳಿದುದ 
ನರಸ ಬಲ್ಲವರಾರು ಧರ್ಮರಹಸ್ಯ ವಿಸ್ತರವ ||೫೮||

ಧರ್ಮದಾಧಾರದಲಿಹುದು ಜಗ 
ಧರ್ಮವುಳ್ಳನನಾಶ್ರಯಿಸುವುದು 
ಧರ್ಮವೇ ನೂಕುವುದು ಜನ್ಮಾಂಯರದ ಪಾತಕವ 
ಧರ್ಮವೇ ಸರ್ವ ಪ್ರತಿಷ್ಠಿತ
ಧರ್ಮವೆಂಬುದು ಪರಮಪದವಾ 
ಧರ್ಮವನು ಬಿಟ್ಟಿಹುದು ಬದುಕಲ್ಲರಸಕೇಳೆಂದ ||೫೯||

ಪರಿಪರಿಯ ಯಜ್ಞವನು ವಿರಚಿಸಿ 
ಸುರಪತಿಯ ಸಂತುಷ್ಟಿಬಡಿಸಲು 
ಸುರಿವನವ ಸಂಪೂರ್ಣವಾಗಿ ಸುವೃಷ್ಟಿಯನು ಜಗಕೆ 
ಹರಿಹಯನು ಸಸ್ಯಾಧಿಕಂಗಳ 
ಹೊರೆಯಲೋಸುಗ ಮೈಗೆ ಮೈಯಾ 
ಗಿರುತಿಹನು ಭುವನದೊಳವನೀಶ ಕೇಳೆಂದ ||೬೦||

ಎತ್ತಲಾನು ಸುತೀರ್ಥವೆಂಬುದ 
ಚಿತ್ತವಿಸುವೊಡೆ ಸರ್ವ ತೀರ್ಥದ 
ಸತ್ವವನು ಸನ್ನಿಹಿತವಾಗವಧರಿಸು ನೀನದನು 
ವಿಸ್ತರಿಸುವೆನು ವಿಪ್ರಪಾದ ವಿ 
ಮುಕ್ತ ವಿಮಳೋದಕವನಾವನು 
ನೆತ್ತಿಯಲಿ ಧರಿಸಿದವನವನು ಕೃತಾರ್ಥನಹನೆಂದ ||೬೧||

ಶರಧಿಯೊಳು ಹರಿ ಯೋಗನಿದ್ರೆಯೊ 
ಳಿರಲು ಭೃಗುವೈತಂದು ಲಕ್ಷ್ಮೀ 
ಧರನ ವಕ್ಷಸ್ಥಳವನೊದೆಯಲು ಮುನಿಯ ಚರಣವನು 
ಸಿರಿಯುದರದೊಳಗೊತ್ತಿ ಧರಣೀ
ಸುರರ ಮೆರೆದನು ತೀರ್ಥಪಾದವ 
ಧರೆಯೊಳಗೆ ಬುಧರಿಂದಧಿಕವಹ ತೀರ್ಥವಿಲ್ಲೆಂದ ||೬೨||

ಮಾಡುತಿಹ ಯಜ್ಞವನು ಪರರಿಗೆ 
ಮಾಡಿಸುವ ವೇದಾಧ್ಯಯನವನು 
ಮಾಡುತಿಹ ತದ್ವಿಷಯದಲಿ ಯೋಗ್ಯರನು ಮಾಡಿಸುವ 
ಮಾಡುತಿಹ ದಾನವನು ಲೋಗರು 
ನೀಡುತಿರಲೊಳಕೊಂಬ ಗುಣವನು 
ಕೂಡಿಕೊಂಡಿಹನೇ ಸಮರ್ಥನು ವಿಪ್ರರೊಳಗೆ ||೬೩||

ವೇದಪುರುಷನ ವಿಗ್ರಹದಲಿ ವಿ 
ಭೇದವಿಲ್ಲದೆ ಬಿಸಜ ಸಂಭವ 
ನಾದಿಯಾದ ಸಮಸ್ತ ದೇವರು ನೆಲೆವನೆಗಳಾಗಿ 
ನೇದುಕೊಂಡಿಹರಂತು ಕಾರಣ 
ವಾದಿಸದೆ ವಿಪ್ರೋತ್ತಮರನಭಿ 
ವಾದಿಸುವುದುತ್ತಮವಲೇ ಕೇಳೆಂದನಾ ಮುನಿಪ ||೬೪||

ಯುವತಿಯರು ಗಾಯಕರು ಕವಿಗಳು 
ತವತವಗೆ ಕೈವಾರಿಸುವರಾ 
ವವನವನೆ ಯಾವಗಲು ದೂಷಕನಿಹಪರಂಗಳಿಗೆ 
ಇವರು ಮೂವರು ನಿಂದಿಸುವರಾ 
ವವನವನು ಸರ್ವಜ್ಞನೆನಿಸುವ
ನವನಿಪತಿ ಚಿತ್ತೈಸು ಧರ್ಮರಹಸ್ಯ ವಿಸ್ತರವ ||೬೫||

ಜ್ಞಾತವಾವ್ದಜ್ಞಾತವಾವುದು 
ನೀತಿ ಯಾವುದನೀತಿ ಯಾವುದು 
ದ್ವೈತವಾವ್ದದ್ವೈತವಾವುದು ವೈದಿಕಾಂಗದಲಿ 
ಖ್ಯಾತಿಯಾವ್ದಖ್ಯಾತಿ ಯಾವುದು  
ಜಾತಿಯಾವುದಜಾತಿ ಯಾವುದು 
ಭೂತಳದೊಳವನೀಶ ಚಿತ್ತೈಸೆಂದನಾ ಮುನಿಪ ||೬೬||

ಧರಣಿಯಮರರ ಸೇವೆಯನು ವಿ 
ಸ್ತರಿಸಿ ಸತ್ಕಾರದಲವರನಾ 
ದರಿಸಿ ಬಹುಮಾನವನು ವಿರಚಿಸಿದನಾ ಮಹಾತ್ಮರಿಗೆ 
ಎರವಹುದೆ ಸ್ವರ್ಗಾಪವರ್ಗದ 
ಸಿರಿಯದೆಂಬುದನರಿದು ನಡೆವಂ 
ಗರಿದೆನಿಸುವದದಾವುದೈ ಹೇಳೆಂದನಾ ಮುನಿಪ ||೬೭||

ಯೋನೀಮುಖವೆಂಬತ್ತುನಾಲ್ಕು  ನ 
ವೀನ ಜನ್ಮಂಗಳೊಳಗುದಯಿಸಿ 
ಹಾನಿ ವೃದ್ಧಿಗಳರಿದು ಜ್ಞಾನದ ಕಡೆಯ ಕಣೆಯದಲಿ 
ಮಾನವರ ಬಸುರಿನಲಿ ಬಂದ 
ಜ್ಞಾನತರರಾಗಳಿವುದಿದು ಕ 
ಕರ್ಮಾನುಗತವಾಗಿಹುದಲೇ ಭೂಪಾಲ ಕೇಳೆಂದ ||೬೮||

ಪಾನದಿಂ ಸೂಕರನು ಬುಧರವ 
ಮಾನದಿಂ ಕ್ಷಯರೋಗಿ ಗುರುಜನ 
ಹಾನಿಯಿಂದವೆ ಕುಷ್ಠಿ ಗರ್ವದಿ ಕುಕ್ಕುಟಾಹ್ವಯನು 
ಹೀನಗತಿಯಿಂದುರಗ ನಾನಾ 
ಯೋನಿಗಳಲಿ ಚರಾಚರವು ಕ 
ರ್ಮಾನುಗತವಾಗುದಯಿಸುವುದವನೀಶ ಕೇಳೆಂದ ||೬೯||

ಪರರ ಪಟುತರವಾದದಲಿ ಮೂ 
ಗರವೊಲಿಹ ಪರ ವಚನದುತ್ಕಟ 
ವೊರೆಗೆ ಬಧಿರತ್ವವನು ಪರಗುಣ ದೋಷ ದರುಶನವು 
ದೊರಕಿದೊಡೆ ಜಾತ್ಯಂಧನೆನಿಸುವ 
ಪುರುಷನಾವವನವನು ಸಾಕಕ್ಷಾ 
ತ್ಪರಮಪುರುಷೋತ್ತಮನಲೇ ಭೂಪಾಲ ಕೇಳೆಂದ ||೭೦||

ಇಷ್ಟಸಂತರ್ಪಣವ ಮಾಡಿ ವಿ 
ಶಿಷ್ಟಪೂಜಾಪಾತ್ರರನು ಸಂ 
ತುಷ್ಟಿಬಡಿಸಿ ಸಧರ್ಮದಲಿ ರಾಜ್ಯವನು ರಕ್ಷಿಸುತ 
ಕೊಟ್ಟವರ ಕೊಂಡವರ ಮತ್ತೊಡ 
ಬಟ್ಟವರನನುಜಾತ್ಮಜರನೊಳ 
ಗಿಟ್ಟುಕೊಂಡಿಹುದುಚಿತವದು ಭೂಪಾಲ ಕೇಳೆಂದ ||೭೧||

ನುಡಿದುದನು ಪೂರೈಸಿ ಕಾಲದ 
ಕಡೆಯ ಕಾಣಿಸಿ ಹೋಹವರ ಬೀ 
ಳ್ಕೊಡುತ ಹಳೆಯರನಾಪ್ತರನು ಮನ್ನಿಸುತ ತನ್ನುವನು 
ಹಿಡಿದು ಸೇವೆಯ ಮಾಡುವವರನು 
ಬಿಡದೆ ನಾನಾ ತೆರದ ಪದವಿಯ 
ಕೊಡುತಲಿಹುದಿದು ನೀತಿ ಚಿತ್ತೈಸೆಂದನಾ ಮುನಿಪ ||೭೨||

ವಿಲಗ ಸಾಗರನಾಗಿ ದೇಶವ 
ಹಿಳಿದು ಹಿಂಡುತ ದಾನ ಧರ್ಮವ 
ನುಳಿದು ದೇವ ಬ್ರಾಹ್ಮರೆನ್ನದೆ ಕಂಡವರನೆಳೆದು 
ಗಳಿಗೆ ಸಂಖ್ಯೆಗೆ ದಂಡ ದೋಷವ 
ಕೊಳುತ ಕಡೆಯಲಧೋಗತಿಗಳೊಳ 
ಗಿಳಿದು ಹೋಹುದನೀತಿ ಚಿತ್ತೈಸೆಂದನಾ ಮುನಿಪ ||೭೩||

ಯೋನಿಯಲ್ಲದ ಠಾವುಗಳಲಿ ವಿ 
ಯೋನಿಯಹ ವಿಷಯಂಗಳಲಿ ಪಶು 
ಯೋನಿಯಲಿ ಸಂಭೋಗಿಸುವ ಪಾತಕರ ಪರಿವಿಡಿಯ 
ಏನ ಹೇಳಲು ಬಹುದು ನರಕ ವಿ 
ತಾನದೊಳಗೋಲಾಡಿ ಬಳಿಕಾ 
ಶ್ವಾನ ಯೋನಿಯೊಳವರು ಜನಿಸುವರೆಂದನಾ ಮುನಿಪ ||೭೪||

ಜೀವ ಪರಮನಭೇದವನು ಸಂ 
ಭಾವಿಸದೆ ವೇದಾಂತ ಶಾಸ್ತ್ರವಿ 
ದಾವ ಮುಖವೆಂದರಿಯದೆಯೆ ದಾಸೋಹವೆಂದೆನುತ 
ಕೋವಿದರ ಸಂಗವನುಳಿದು ಮಾ 
ಯಾ ವಿಲಾಸದ ನೆಲೆಯ ನೋಡದೆ 
ಸಾವುತಿಹುದೇ ದ್ವೈತ ಚಿತ್ತೈಸೆಂದನಾ ಮುನಿಪ ||೭೫||

ಉತ್ತಮರ ಸಂಗದೊಳಗೋಲಾ 
ಡುತ್ತ ದುರ್ವಿಷಯಂಗಳನು ಮುರಿ 
ಯೊತ್ತಿ ಸಕಲ ಚರಾಚರದ ಸುಖ ದುಃಖವನು ತಾನು 
ಹೊತ್ತು ನಡೆವುತ ಪುಣ್ಯ ಪಾಪವಿ 
ದೆತ್ತಣದು ತನಗೆಂಬ ಕಾಣಿಕೆ 
ಯುತ್ತರೋತ್ತರ ಸಿದ್ಧಿ ಚಿತ್ತೈಸೆಂದನಾ ಮುನಿಪ ||೭೬||

ಪೊಡವಿಯೊಳಗೆ ಪುರೋಹಿತರನವ
ಗಡಿಸಿ ಧರ್ಮದ ಬಲದಿ ನಾಕಕೆ 
ನಡೆವ ರಾಯರ ಹೊಯಿದಿಳಿಯಲಿಕ್ಕು ವರಧೋಗತಿಗೆ 
ಕೆಡಿಸುವರು ರಾಷ್ಟ್ರವನು ಕ್ಷಾತ್ರವ 
ತಡೆಗಡಿಸಿ ಚತುರಂಗಬಲವನು 
ಹುಡುಹುಡಿಯ ಮಾಡುವರು  ನಿರ್ಜರರರಸ ಕೇಳೆಂದ ||೭೭||

ಬಲಿಯ ರಾಜ್ಯವ ವಿಭೀಷಣನ ಸಿರಿ 
ಜಲನಿಧಿಯ ಗಾಂಭೀರ್ಯ ಬಾಣನ 
ಬಲುಹು ಹನುಮಾನುವಿನ ಭುಜಬಲ ವೀರ ರಾಘವನ 
ಛಲ ದಧೀಚಿಯ ದಾನ ಪಾರ್ಥನ 
ಕೆಳೆ ಯುಧಿಷ್ಠಿರ ನೃಪನ ಸೈರಣೆ 
ಗಳವಡುವ ಬದುಕುಳ್ಳಡದು ವಿಖ್ಯಾತಿ ಕೇಳೆಂದ ||೭೮||

ಇರುಳು ಹಗಲನವರತ ಪತಿ ಪರಿ 
ಚರಿಯವನು ಮಾಡುತ್ತ ಪರಪುರು 
ಷರನು ನೆನೆಯದೆ ಹಲವು ಸಂತತಿಗಳಿಗೆ ತಾಯಾಗಿ 
ಇರುತ ದೇವ ಬ್ರಾಹ್ಮರನು ತಾ 
ನಿರುತ ಸತ್ಕರಿಸುತ್ತಲಂತಃ 
ಪುರದಲೆಸೆಯೆ ಗೃಹಸ್ಥೆಯೆನಿಸುವಳರಸ ಕೇಳೆಂದ ||೭೯||

ಮಡದಿ ನಿಜನಿಳಯವನು ಬಿಟ್ಟಡಿ 
ಗಡಿಗೆ ಪರಗೃಹದೊಳಗೆ ಬಾಯನು 
ಬಡಿದು ಮನೆಮನೆವಾರ್ತೆಯೆನ್ನದೆ ಬೀದಿಗಲಹವನು 
ಒಡರಿಚುವ ಪತಿಯೊಬ್ಬನುಂಟೆಂ
ದೆಡಹಿ ಕಾಣದ ದಿಟ್ಟೆ ಹತ್ತನು 
ಹಡೆದೊಡೆಯು ವರ್ಜಿಸುವುದುತ್ತಮ ಪುರುಷರುಗಳೆಂದ ||೮೦||

ಮುಡಿಯನೋಸರಿಸುತ್ತ ಮೇಲುದ 
ನಡಿಗಡಿಗೆ ಸರಿವುತ್ತ ಮೌನವ 
ಹಿಡಿದಧೋಮುಖಿಯಾಗಿ ಕಿಗ್ಗಣ್ಣಿಕ್ಕಿ ಕೆಲಬಲನ 
ಬಿಡದೆ ನೋಡುತ ಮುಗುಳು ನಗೆಯಲಿ 
ಜಡಿದು ಜಾರುವ ಜಾರವನಿತೆಯ 
ಗೊಡವೆಗೊಳಗಾಗದವರುತ್ತಮಪುರುಷರುಗಳೆಂದ ||೮೧||

ಗುರುವಿನಲಿ ತಂದೆಯಲಿ ತಾಯಲಿ 
ಹಿರಿಯರಲಿ ದೈವದಲಿ ಪಾಪದ 
ಇರುಬಿನಲಿ ಗೋವಿನಲಿ ತೀರ್ಥದಲಿಮಿಗೆ ತನ್ನುವನು 
ಹೊರೆವ ದಾತಾರನಲಿ ಮಂತ್ರದ 
ಪರಮ ಸೇವೆಗಳಲ್ಲಿ ಧರಣೀ 
ಸುರರೊಳಂಜಿಕೆ ಹಿರಿದಿರಲು ಬೇಕೆಂದನಾ ಮುನಿಪ ||೮೨||

ನೀತಿವಿದನಲ್ಲದ ಕುಮಂತ್ರಿ ವಿ 
ನೀತಿಪರನಲ್ಲದ ಪುರೋಹಿತ 
ನೇತಕವರಿಂದಾವ ಪುರುಷಾರ್ಥಂಗಳೆಯ್ದುವುವು
ಕಾತರಿಸಿ ಸಮರಾಂಗಣಕೆ ಭಯ 
ಭೀತನಹ ಭೂಭುಜನ ದೆಸೆಯಿಂ 
ಬೀತು ಹೋಗದೆ ಸಕಲಸಂಪದವರಸ ಕೇಳೆಂದ ||೮೩||

ಧರ್ಮವಾವುದು ಮೇಣು ಜಗದೊಳ 
ಧರ್ಮವಾವುದು ರಾಜ ಮಂತ್ರದ 
ಧರ್ಮವಾವುದು ಮಾರ್ಗವಾವುದಮಾರ್ಗವೆಂದೇನು 
ಕರ್ಮವಾವುದು ವಿಧಿವಿಹಿತ ದು 
ಷ್ಕರ್ಮವಾವುದದೆಂಬ ಭೇದವ
ನಿರ್ಮಿಸಾ ಸಾಕೆಂದು ಬಿನ್ನಹ ಮಾಡಿದನು ಭೂಪ ||೮೪||

ಸತಿಸಹಿತ ವಿರಚಿಸಿದ ಧರ್ಮ 
ಸ್ಥಿತಿ ಸಮೃದ್ಧಿಕವಾಗಿ ಸಲುವುದು 
ಪತಿಗಳಲ್ಲದೆ ತನ್ನ ಸ್ವಾತಂತ್ರ್ರ್ಯದಲಿ ಮಾಡಿದುದು 
ಅತಿಶಯವನೆಯ್ದದು ಕಣಾ ಭೂ 
ಪತಿಯೆ ಕೇಳಿಹಪರದ ಗತಿ ನಿಜ 
ಸತಿಯ ದೆಸೆಯಿಂದಲ್ಲದೆ ಫಲಿಸುವುದು ಹುಸಿಯೆಂದ ||೮೫||

ಅತಿಥಿ ಪೂಜೆಯನುಳಿದ ಜೀವ 
ಸ್ಥಿತರ ಧರ್ಮಸ್ಥಿತಿಯನಪಹರಿ 
ಸುತ ಬಲದಲವನಿಯಲಿ ನಿರಿಯಣದ ಕಾಲದಲಿ 
ಗತಿಗೆಡಿಸಿ ಕೊಂಡೊಯ್ದು ವೈವ 
ಸ್ವತನು ನಾಯಕನರಕದೊಳಗ 
ದ್ದುತ ಬಹನು ಕುಲಕೋಟಿಸಹಿತವನೀಶ ಕೇಳೆಂದ||೮೬||

ತಮ್ಮ ಕಾರ್ಯ ನಿಮಿತ್ತ ಗರ್ವವ 
ನೆಮ್ಮಿದರೆ ತದ್ಗರ್ವದಿಂದುರೆ 
ದಿಮ್ಮಿತಹುದಾ ಕಾರ್ಯ ಮರ್ತ್ಯ ಚರಾಚರಂಗಳಲಿ 
ನಿರ್ಮಮತೆಯಲಿ ನಡೆದುಪಶ್ರುತಿ 
ಗುಮ್ಮಹವನೈದುವವೊಲೌಕುವ 
ಮರ್ಮಿಗಳನೊಳಹೊಯ್ದು ಕೊಂಬುದು ಭೂಪ ಕೇಳೆಂದ ||೮೭||

ಅರಸ ಕೇಳೈ ಮಾರ್ಗ ಮೂರಾ 
ಗಿರುತಿಹವು ಸಂಪೂರ್ಣ ಧನ ಗುರು 
ಪರಿಚರಿಯ ಪರಿವರ್ತನೆಗಳೆಂಬಿನಿತನತಿಗಳೆದು 
ತಿರುಗಿ ಬಂದೊಡೆ ನಾಲ್ಕನೆಯ ಮತ 
ದೊರಕಲರಿವುದೆ ಕಲೆಗಳನು ಸಂ 
ವರಿಸುವ ನರೋತ್ತಮರಿಗವನೀಪಾಲ ಕೇಳೆಂದ ||೮೮||

ಕಾದುದಕದಾಸ್ನಾನ ಸಿದ್ಧಿಯ 
ವೈದಿಕಾಂಗದ ಮಂತ್ರ ಸಾಧನ 
ವೇದ ಹೀನರಿಗಿತ್ತ ಫಲವಾ ಶ್ರಾದ್ಧ ಕರ್ಮದಲಿ 
ಐದದಿಹ ದಕ್ಷಿಣೆಗಳೆಂಬಿವು 
ಬೂದಿಯಲಿ ಬೇಳಿದ ಹವಿಸ್ಸಿನ 
ಹಾದಿಯಲ್ಲದೆ ಫಲವನೀಯವು ಭೂಪ ಕೇಳೆಂದ ||೮೯||

ಇಹಪರದ ಗತಿ ದಾನ ಧರ್ಮದ 
ಬಹುಳತಿಗಳನು ತತ್ತ್ವಭಾವದ 
ವಿಹಿತಪುಣ್ಯದ ಬೆಳವಿಗೆಯ ಫಲವೊಂದು ನೂರಾಗಿ 
ಬಹುದು ಸದ್ವಂಶದಲಿ ಜನಿಸಿಹ 
ಮಹಿಮನಿರೆ ಲೋಕಾಂತರದ ಸುಖ 
ವಹುದು ಸಂತಾನಾಭಿವೃದ್ಧಿಯು ನೃಪತಿ ಕೇಳೆಂದ ||೯೦||

ಚೋರನನು ಕಾಣುತ್ತ ಮರಳಿದು 
ಚೋರನೆಂದೊಡೆ ಪತಿತನನು ನಿ 
ಷ್ಟೂರತನದಿಂ ಪತಿತನೆಂದೊಡೆ ಸಾಮ್ಯದೋಷವದು 
ಸಾರುವುದು ಮಿಥ್ಯೋತ್ತರದಲಿ ವಿ 
ಚಾರಿಸದೆ ನುಡಿದವರಿಗಿಮ್ಮಡಿ 
ನಾರಕದ ಫಲ ತಪ್ಪಧವನೀಪಾಲ ಕೇಳೆಂದ ||೯೧||

ವಿನುತ ಮಧುಕೈಟಬರ ಮೇಧ 
ಸ್ಸಿನಲಿ ಮೇದಿನಿಯಾದುದಿದ ನೀ 
ನನುಭವಿಸುವೊಡೆ ಪುಣ್ಯಕೀರುತಿಯೆಂಬ ಪರಿಮಳದ 
ಹೊನಲಿನಲಿ ತರವಿಡಿದು ಲೇಸಾ 
ಗನುಭವಿಸುವುದದಲ್ಲದಿದ್ದೊಡೆ 
ಮನುಜ ಮಾಂಸವ ಭಕ್ಷಿಸಿದ ಫಲವರಸ ಕೇಳೆಂದ ||೯೨||

ತನ್ನ ದಾನವಪಹರಿಸಿ ಕೊಂ 
ಡನ್ಯರಿತ್ತುದಕಡ್ಡ ಬೀಳುವ 
ಧನ್ಯರುಗಳರವತ್ತು ಸಾವಿರ ವರುಷ ಪರಿಯಂತ 
ಖಿನ್ನವಹ ವಿಷ್ಠೆಯೊಳು ಕ್ರಿಮಿಗಳ 
ಜನ್ಮದಲ್ಲಿಹರಿದನರಿದು ನೀ 
ನಿನ್ನು ಕೊಟ್ಟುದನುಳುಹಿಕೊಂಬುದು ಧರ್ಮವಲ್ಲೆಂದ ||೯೩||

ಕರಣ ಮೂರರೊಳಿತ್ತ ವಸ್ತುವ 
ನಿರಿಸಿಕೊಂಡರೆ ಮಾಸಮಾಸಾಂ 
ತರದೊಳೊಂದಕೆ ನೂರು ಗುಣದಲಿ ಕೋಟಿ ಪರಿಯಂತ 
ಹಿರಿದಹುದು ದಾನ ಪ್ರಶಂಸೆಯ 
ನಿರಿಸಿಕೊಂಡಿಹ ದಾನ ನರಕವ 
ನೆರಡಕೊಂದೇ ದಾನ ಕಾರಣವೆಂದನಾ ಮುನಿಪ ||೯೪||

ದ್ಯೂತದಲಿ ಮದ್ಯದಲಿ ಘನ ಕಂ 
ಡೂತಿಯಲಿ ನಿದ್ರೆಯಲಿ ಕಲಹ ವಿ 
ಘಾತಿಯಲಿ ಮೈಥುನದಲಾಹಾರದಲಿ ಬಳಿಸಂದು 
ಕೈತವದ ಉದ್ಯೋಗದಲಿ ದು 
ರ್ನೀತಿಯಲಿ ಪರಸತಿಯರಲಿ ಸಂ 
ಪ್ರೀತಿ ಬಲಿವುದು ಬೆದಕ ಬೆದಕಲು ಭೂಪ ಕೇಳೆಂದ ||೯೫||

ದುಷ್ಕೃತವನೆಸಗುವರು ಫಲದಲಿ 
ಕಕ್ಕುಲಿಸುವರು ಸುಕೃತವೆಂಬುದ 
ಲೆಕ್ಕಿಸರು ತತ್ಫಲವನೇ ಬಯಸುವರು ಮಾನವರು 
ಇಕ್ಕದೆರೆಯದೆ ಬಿತ್ತಿ ಬೆಳೆಯದೆ 
ಪುಕ್ಕಟೆಯ ಸ್ವರ್ಗಾದಿ ಭೋಗವು 
ಸಿಕ್ಕಲರಿವುದೆ ರಾಯ ಚಿತ್ತೈಸೆಂದನಾ ಮುನಿಪ ||೯೬||

ವರ ಶ್ರುತಿ ಸ್ಮೃತಿಗಳು ಕಣಾ ಭೂ 
ಸುರರ ದೃಷ್ಟಿಗಳಿವರೊಳೊಂದಕೆ 
ಕೊರತೆಯಾಗಲು ಕಾಣನೆನಿಸುವನೆರಡನರಿಯದಿರೆ 
ನಿರುತವಿದು ಜಾತ್ಯಂಧನೆನಿಸುವ 
ನರಸ ಕೇಳೀ ಮಾಂಸ ದೃಷ್ಟಿಗ 
ಳೆರವಲೇ ಸರ್ವತ್ರ ಸಾಧಾರಣವು ಲೋಕದಲಿ ||೯೭||

ವಾಚಿಸದೆ ವೇದಾರ್ಥ ನಿಚಯವ 
ನಾಚರಿಸದಾಲಸ್ಯದಿಂದು 
ತ್ಕೋಚನಾಗಿ ಪರಾನ್ನ ಪೂರಿತ ತಪ್ತ ತನುವಾದ 
ನೀಚನಹ ಭೂಸುರನ ಕರುಳನು 
ತೋಚುವಳಲೈ ಮೃತ್ಯುವವನನು 
ನಿಶಾಚರನು ದ್ವಿಜನಲ್ಲ ಚಿತ್ತೈಸೆಂದನಾ ಮುನಿಪ ||೯೮||

ಸರಸಿಜಾಕ್ಷನ ವಿಷ್ಣು ನಾಮ 
ಸ್ಮರಣೆಯಲಿ ಶ್ರುತಿಮೂಲ ವಾಕ್ಯೋ
ತ್ಕರುಷೆಯಲಿ ಭೂತಕ್ಕೆ ಹಿತವಹ ನಡವಳಿಯನರಿದು 
ಪರವಚನವನು ತ್ರಿಕರಣದೊಳು 
ಚ್ಚರಿಸಲಾಗದು ಸರ್ವಥಾ ಸ 
ತ್ಪುರುಷರಭಿಮತವಿದು ಚಿತ್ತೈಸೆಂದನಾ ಮುನಿಪ ||೯೯||

ಲೋಕಸಮ್ಮತವಾದುದನು ನಿ 
ರಾಕರಿಸುವವರುಗಳು ತಾವೇ 
ನಾಕೆವಾಳರೆ ಜಗಕೆ ತಮ್ಮನದಾರು ಬಲ್ಲವರು 
ಬೇಕು ಬೇಡೆಂಬುದಕೆ ತಾವವಿ 
ವೇಕಿಗಳು ಮೊದಲಿಂಗೆ ಪ್ರಾಮಾ 
ಣೀಕರುಗಳವರಲ್ಲ ಚಿತ್ತೈಸೆಂದನಾ ಮುನಿಪ ||೧೦೦||

ಉತ್ತಮರುಗಳ ನಿಂದಿಸುತ ದು 
ರ್ವೃತ್ತನಾಗಿಯಧರ್ಮ ಕೋಟಿಯೆ 
ನಿತ್ಯವಿಧಿ ತನಗಾಗಿ ಧರ್ಮದ ತಾರತಮ್ಯವನು 
ಎತ್ತಲೆಂದರಿಯದೆ ಜಗಕ್ಕೆ ಜ 
ಡಾತ್ಮರಾಗಿಹ ವೇದಬಾಹ್ಯರ 
ಮೃತ್ಯುದೇವತೆ ಮುರಿದು ಮೋದದೆ ಬಿಡುವಳೇಯೆಂದ ||೧೦೧||

ಲೋಕದೊಳಗಣ ಪುಣ್ಯ ಪಾಪಾ 
ನೀಕವನು ಯಮರಾಜನಾಲಯ 
ದಾಕೆವಾಳಂಗರುಹುವರು ಹದಿನಾಲ್ಕು ಮುಖವಾಗಿ 
ನಾಲ್ಕು ಕಡೆಯಲಿ ಕವಿದು ಬರಿಸುವ 
ರೌಕಿ ದಿನದಿನದಲ್ಲಿ ಗರ್ವೋ 
ದ್ರೇಕದಲಿ ಮೈಮರೆದು ಕೆಡಬೇಡೆಂದನಾ ಮುನಿಪ ||೧೦೨||

ಚಕ್ರಿಯೊಬ್ಬಗೆ ಹತ್ತು ಕಡಿಕರ 
ಲೆಕ್ಕವಂತಾ ಚಕ್ರಿ ಹತ್ತರ 
ಲೆಕ್ಕದೊಳಗಾ ಧ್ವಜಿ ಕಣಾ ಧ್ವಜಿ ಹತ್ತರ ಸಮಾನ 
ಮಿಕ್ಕ ವೇಸಿಗೆ ವೇಸಿ ಹತ್ತರ  
ಲೆಕ್ಕವೊಬ್ಬರಸಂಗೆ ಪಾತಕ 
ವೊಕ್ಕಲಿಕ್ಕುವುದರಸುತನ ಸಾಮಾನ್ಯವಲ್ಲೆಂದ ||೧೦೩||

ಬಲುಕರಿಸಿ ಭೂಮಿಯೊಳಗೊಂದಂ 
ಗುಲವನೊತ್ತಿದವಂಗೆ ಪಶು ಸಂ 
ಕುಲದಲೊಂದೇ ಗೋವನಪಹರಿಸಿದ ದುರಾತ್ಮಂಗೆ 
ಅಳುಪಿ ಕನ್ಯಾರತ್ನದೊಳಗೊ 
ಬ್ಬಳನು ಭೋಗಿಸಿದಂಗೆ ನರಕದೊ 
ಳಿಳಿವುದಲ್ಲದೆ ಬೇರೆ ಗತಿಯಿಲ್ಲೆಂದನಾ ಮುನಿಪ ||೧೦೪ ||

ದಾನವಿರಹಿತರಾಗಿ ಜನಿಸಿದ 
ಮಾನವರು ದಾರಿದ್ರರದರಿಂ 
ಹೀನಸುಕೃತಿಗಳಾಗಿಯದರಿಂ ಘೋರತರ ನರಕ 
ಆ ನರಕದಿಂ ಮರಳಿ ಪಾತಕ 
ಯೋನಿ ಮರಳಿ ದರಿದ್ರವದು ತಾ 
ನೇನ ಮಾಡಿಯು ಬೆನ್ನಬಿಡದವನೀಶ ಕೇಳೆಂದ ||೧೦೫||

ಪಾಕಶಾಸನನೈದಿ ವೃತ್ರನ 
ಢಾಕುಗೆಡಸಿ ದಧೀಚಿಯಸ್ಥಿಯ 
ಲೌಕಿ ಹೊಯ್ಯಲು ದಾನವನ ತನು ನೀರೊಳಡಗೆಡೆಯೆ 
ತೂಕ ಕುಂದಿ ಜಲಾಧಿದೇವತೆ 
ಯಾ ಕಪರ್ದಿಯ ಕರುಣದಲಿ ದ 
ರ್ಭಾಕೃತಿಯ ಕೈಕೊಂಡುದವನೀಶ ಕೇಳೆಂದ ||೧೦೬||

ಆದಿಯಲಿ ಕಮಲಾಸನನು ಮಧು 
ಸೂದನನು ಮಧ್ಯದಲಿ ಮೇಲಣ 
ಹಾದಿಯಲಿ ಗಿರಿಜೇಶನಿರೆ ತ್ರೈಮೂರ್ತಿಮಯವಾಗಿ 
ಕಾದುಕೊಂಡಿಹರಖಿಳ ಲೋಕವ 
ನೈದೆ ದರ್ಭಾಂಕುರದ ಮಹಿಮೆಯ 
ಭೇದವನು ಬಣ್ಣಿಸುವನಾವನು ಭೂಪ ಕೇಳೆಂದ ||೧೦೭||

ಬೆರಳ ಮೊದಲಲಿ ಭೂಸುರರು ನಡು 
ವೆರಳೆಡೆಗಳಲಿ ಪಾರ್ಥಿವರು ತುದಿ 
ವೆರಳೊಳಗೆ ವೈಶ್ಯರುಗಳೀ ಕ್ರಮದಲಿ ಪವಿತ್ರವಿದು 
ಧರಿಸಬೇಹುದು ದಕ್ಷಿಣ ಕರಾಂ 
ಬುರುಹದಲಿ ದಿನದಿನದ ಸಂಧ್ಯಾಂ 
ತರದ ಸಮಯದಲರಸ ಚಿತ್ತೈಸೆಂದನಾ ಮುನಿಪ ||೧೦೮||

ಮಂರೆದಪ್ಪಿದ ಜಪ ಸುಕಲ್ಪಿತ 
ಧಾರೆಯುಡುಗಿದ ದಾನ ದರ್ಭಾ
ಕಾರ ವಿರಹಿತವಾದ ಸಂಧ್ಯಾವಂದನಾದಿಗಳು 
ಪಾರವೆಯ್ದದ ಶೌಚ ವಿನಯ ವೀ 
ಹಾರವಿಲ್ಲದ ಪೂಜೆಗಳುಪ 
ಕಾರವಹುದೇ ರಾಯ ಚಿತ್ತೈಸೆಂದನಾ ಮುನಿಪ ||೧೦೯||

ದೇವತಾಸ್ಥಾನದಲಿ ವಿಪ್ರ ಸ 
ಭಾವಳಯದಲಿ ರಾಜಪುರುಷರ 
ಸೇವೆಯಲಿ ಗುರುಸದನದಲಿ ನದಿಯಲಿ ತಟಾಕದಲಿ 
ಗೋವುಗಳ ನೆರವಿಯಲಿ ವರ ವೃಂ 
ದಾವನದೊಳುಪಹತಿಯ ಮಾಡುವು 
ದಾವ ಗುಣ ಗರುವರಿಗೆ ಚಿತ್ತೈಸೆಂದನಾ ಮುನಿಪ ||೧೧೦||

ದೆಸೆಗಳೇ ವಾಸಸ್ಸು ರಾಜ್ಯ 
ಪ್ರಸರಣವು ನಿರ್ಲಜ್ಜೆ ಜಟೆ ರಂ 
ಜಿಸುವ ಧೂಳೀ ದೂಸರದ ಗಂಗಾಧರನವೋಲು 
ಎಸೆವ ಸುತರುಗಳಿಲ್ಲದಿರೆ ಶೋ 
ಭಿಸುವುದೇ ಸಂಸಾರವೆಂಬುದು 
ವಸುಧೆಯೊಳು ಪುಣ್ಯಾಧಿಕರುಗಳಿಗಲ್ಲದಿಲ್ಲೆಂದ ||೧೧೧||

ಗುರುಸುತನವೋಲಾಯು ನೀಲಾಂ 
ಬರನವೊಲುಬಲ ದಶರಥನವೋಲ್ 
ಸಿರಿ ನದೀಜನವೋಲು ಶೌರ್ಯವು ರಘುಪತಿಯವೋಲು 
ಅರಿವಿನಾಶನ ನಹುಷನವೊಲೈ 
ಶ್ವರಿಯ ಮಾರುತಿಯವೊಲು ಗತಿ ಸಂ 
ವರಿಸುವುದು ಶಿವನೊಲಿದವರುಗಳಿಗಲ್ಲದಿಲ್ಲೆಂದ ||೧೧೨||

ಕ್ಷಿತಿಯವೊಲು ಪಾವನತೆ ಕುರು ಭೂ 
ಪತಿಯವೋಲಭಿಮಾನ ಲಕ್ಷ್ಮೀ 
ಪತಿಯವೊಲು ಸತ್ಕೀರ್ತಿ ವಿದುರನವೋಲು ವಿಜ್ಞಾನ 
ಕ್ಷಿತಿಯವೊಲು ಸೈರಣೆ ಸುಹೃತ್ಸಂ
ತತಿಯವೊಲು ಪರಿಣಾಮ ಕುಂತೀ
ಸುತರವೊಲು ಸತ್ಯಾಧಿಕರು ಲೋಕದೊಳಗಿಲ್ಲೆಂದ ||೧೧೩||

ಗಗನದಗಲದಿನುಗುವವೃಷ್ಟಿಯೊ
ಳೊಗೆದ ಕೀಲಾಲವು ಸಮುದ್ರವ 
ಹೊಗುವ ನದಿ ನಾನಾ ಪ್ರಕಾರದ ರೂಪುಗಳಲೆಸೆವ 
ಒಗುಮಿಗೆಯ ದೈವದ ಪದಾಂಬುಜ 
ಯುಗಳದರ್ಚನೆ ಪೂಜನೆಗಳಿವು 
ಜಗದುದರನನು ಮುಟ್ಟವೇ ಭೂಪಾಲ ಕೇಳೆಂದ ||೧೧೪||

ಜಲದೊಳಗೆ ವಾರಾಹ ವಿಷ್ಣು
ಸ್ಥಳದೊಳಗೆ ವಾಮನನು ವನ ಸಂ   
ಕುಳದೊಳಗೆ ನರಸಿಂಹನಾಗಿಯೆ ಭಕ್ತನಿಕರವನು 
ಸಲಹುತಿಹನೊಮ್ಮೆಯು ಜಗತ್ರಯ 
ದೊಳಗು ಹೊರಗೆನ್ನದನುದಿನ 
ಜಲರುಹಾಕ್ಷನು ಕೃಷ್ಣ ಕೇಶವನಲ್ಲದಿಲ್ಲೆಂದ ||೧೧೫||

ಕತ್ತಲೆಯ ಕಾಲಾಟ ಸೂರ್ಯನ 
ನೊತ್ತುವುದೆ ದುಷ್ಕರ್ಮ ಕೋಟಿಗ 
ಳೆತ್ತ ಮುಟ್ಟುವುವೈ ಮಹಾಪುರುಷರನು ಖಗಪತಿಯ 
ತತ್ತುದೇ ವಿಷ ಕೃಷ್ಣರಾಯನ 
ಭಕ್ತರುಗಳನುಭವಿಸುವುದು ತಾ 
ಪಥ್ಯವೇ ಜಡಜೀವರಿಗೆ ಹೇಳೆಂದನಾ ಮುನಿಪ ||೧೧೬||

ಅರುಹಬಾರದು ಮುಂದೆ ಬಹ ದಿನ 
ಬಿರಿಸು ನೀನೆಚ್ಚೆತ್ತು ನಡೆ ಮೈ 
ಮರೆಯದಿರು ನಿನ್ನಾತ್ಮಜರ ವೈರಾನುಬಂಧದಲಿ 
ಬರಿದಹುದು ಬ್ರಹ್ಮಾಂಡ ನೀನದ 
ನರಿಯೆ ಮೇಲಣ ತಾಗು ಬಾಗಿನ 
ಹೊರಿಗೆ ದೈವಾಧೀನವಾಗಿಹುದೆಂದನಾ ಮುನಿಪ ||೧೧೭||

ತೆರಹುಗುಡದೆ ಧರಿತ್ರಿಯೊಳಗೀ 
ಡಿರಿದ ದೈತ್ಯ ಸಹಸ್ರ ಕೋಟಿಯ 
ನಿರಿದು ಭೂಭಾರವನಿಳುಹಿ ನಿರ್ಜರರ ದುಗುಡವನು 
ಹರಿದು ಹಾಯಿಕಿ ಭಕ್ತರನು ನೆರೆ 
ಮೆರೆಯಲೋಸುಗ ಜನಿಸಿದನು ಹರಿ 
ಯರಿಯಲಾ ಶ್ರೀಕೃಷ್ಣರಾಯನು ಮನುಜನಲ್ಲೆಂದ ||೧೧೮||

ಆತನಾ ಪಾಂಡವರ ಹರಿಬವ 
ನಾತು ಪಾರ್ಥನ ರಥಕೆ ತಾನೇ 
ಸೂತನಾದನು ನಿಮಗೆ ಜಯವೆಲ್ಲಿಯದು ಭೂಪತಿಯೆ 
ಭೂತಳವನೊಪ್ಪಿಸುವುದಸುರಾ 
ರಾತಿಯನು ಮರೆಹೊಕ್ಕು ಬದುಕುವು
ದೀ ತತುಕ್ಷಣವಲ್ಲದಿರ್ದೊಡೆ ಕೆಡುವಿರಕಟೆಂದ ||೧೧೯||

ಜಲಧಿಯೊಳು ದುಗ್ಧಾಭ್ಧಿ ತೀರ್ಥಾ 
ವಳಿಗಳೊಳು ಸುರನದಿ ಮುನೀಶ್ವರ 
ರೊಳಗೆ ವೇದವ್ಯಾಸನಾ ವ್ರತಿಗಳೊಳು ಹನುಮಂತ 
ಜಲರುಹಾಕ್ಷನೆ ದೈವದೊಳು ಕೇ 
ಳುಳಿದ ಧರಣೀಪಾಲರೊಳಗ 
ಗ್ಗಳೆಯನೈ ಧರ್ಮಜನು ಚಿತ್ತೈಸೆಂದನಾ ಮುನಿಪ ||೧೨೦||

ಈ ಪರಿಯ ಬೋಧೆಯಲಿ ನೃಪನನು 
ತಾಪವನು ಮಾಣಿಸಿ ಕುಬುದ್ಧಿ 
ವ್ಯಾಪಕನು ಧೃತರಾಷ್ಟ್ರನೆಂಬಪಕೀರ್ತಿಯನು ಬಿಡಿಸಿ 
ಕಾಪಥಂಗಳ ನಿಲಿಸಿ ತತ್ವ ಕ 
ಳಾಪ ವಿಮಲ ಜ್ಞಾನದುದಯದ 
ರೂಪು ತಾನೆಂಬಂತೆ ಸೂರ್ಯೋದಯವ ಕಾಣಿಸಿದ ||೧೨೧||

ಧರಣಿಪನ ಸಂತೈಸಿದನು ಮುನಿ 
ವರನು ತನ್ನಾಶ್ರಮಕೆ ತಿರುಗಿದ 
ನುರುತರ ಪ್ರೇಮದಲಿ ಧೃತರಾಷ್ಟ್ರಾವನೀಶ್ವರನು 
ಹರಿಯದಮಳಾನಂದ ರಸದಲಿ 
ಹೊರೆದು ಹೊಂಪುಳಿಯೋಗಿ ಲಕ್ಷ್ಮೀ
ಧರನ ನೆನೆದು ರಾಯ ಗದುಗಿನ ವೀರನರಯಣನ ||೧೨೨||

ನೋಡಿ
ಸಂಧಿಗಳು
ಪರ್ವ
<ಪರ್ವಗಳು <>ಆದಿಪರ್ವ<> ಸಭಾಪರ್ವ  <>ಅರಣ್ಯಪರ್ವ <>ವಿರಾಟಪರ್ವ<>ಉದ್ಯೋಗಪರ್ವ< >ಭೀಷ್ಮಪರ್ವ<  >ದ್ರೋಣಪರ್ವ<>ಕರ್ಣಪರ್ವ< >ಶಲ್ಯಪರ್ವ<>ಗದಾಪರ್ವ
ಪರಿವಿಡಿ

ವರ್ಗ:ಕುಮಾರವ್ಯಾಸ
ವರ್ಗ:ಕುಮಾರವ್ಯಾಸ ಭಾರತ
ವರ್ಗ:ಕನ್ನಡ ಸಾಹಿತ್ಯ